ತುಮಕೂರು: ‘ತುಮಕೂರಿನಲ್ಲಿ ದೊಡ್ಡ ಮಟ್ಟದ ಸರ್ಕಾರಿ ಕಾರ್ಯಕ್ರಮಗಳು ಯಾಕಾದರೂ ನಡೆಯುತ್ತವೆಯೋ….? ಎಂಬಷ್ಟರ ಮಟ್ಟಿಗೆ ಜಿಲ್ಲೆಯ ಗ್ರಾಮ ಪಂಚಾಯತ್ ಪಿಡಿಓಗಳು ಕಾರ್ಯದರ್ಶಿಗಳು ರೋಸಿ ಹೋಗಿದ್ದಾರೆಂಬ ಮಾತು ಈಗ ಕೇಳಿಬರುತ್ತಿದೆ. ಯಾವ ಕಾರ್ಯಕ್ರಮ ನಡೆದರೂ ಮೊದಲು ಗ್ರಾ.ಪಂ. ಪಿಡಿಓಗಳ ಜೇಬಿಗೆ ಬರೆ ಎಳೆಯುತ್ತಾರೆಂಬ ಚರ್ಚೆ ಅಲ್ಲಲ್ಲಿ ನಡೆಯುತ್ತಿವೆ.
ನಗರದಲ್ಲಿ ನಡೆಯುತ್ತಿರುವ ಕ್ರೀಡಾಕೂಟಕ್ಕೆ ಆಗಮಿಸುವ ಪತ್ರಕರ್ತರಿಗೆ ಟೀ-ಶರ್ಟ್ ನೀಡಲು ತುಮಕೂರು ತಾಲೂಕು ಪಿಡಿಒಗಳಿಂದ ತಲಾ ೪೦೦೦ ರೂ. ಹಣ ವಸೂಲಿ ಮಾಡಿದ್ದಾರೆಂಬ ಆರೋಪ ಕೇಳಿ ಬರುತ್ತಿದೆ. ಅಂತೆಯೇ ಕ್ರೀಡಾಕೂಟದ ಇತರೆ ಖರ್ಚಿಗಾಗಿ ಜಿಲ್ಲೆಯಾದ್ಯಂತ ಇರುವ ಪಿಡಿಒಗಳಿಂದ ೫೦೦೦ ಹಣ ವಸೂಲಿ ಮಾಡಿರುವ ವಿಚಾರ ಚರ್ಚೆಯಾಗುತ್ತಿದೆ.

ಕ್ರೀಡಾಕೂಟಕ್ಕೆ ಸರ್ಕಾರದಿಂದ ಬಿಡುಗಡೆಯಾಗಿರುವ ಹಣದ ಜೊತೆಗೆ ವಿವಿಧ ಇಲಾಖೆಗಳಿಂದ ಹಣ ವಸೂಲಿ ಮಾಡುವ ಅಗತ್ಯವಿತ್ತೆ…? ಎಂಬ ಮಾತುಗಳು ಕೇಳಿ ಬರುತ್ತಿವೆ.
ಕ್ರೀಡಾಕೂಟಕ್ಕೆ ಸರ್ಕಾರದ ಅನುದಾನ ಬಂದಿದ್ದರೂ ಸಹ ಇಂತಹ ಬೇನಾಮಿ ವಸೂಲಿಗಳಿಂದ ದುಡ್ಡು ಮಾಡಿಕೊಳ್ಳುತ್ತಿರುವವರ್ಯಾರು…. ಎಂಬ ಪ್ರಶ್ನೆಯೂ ಉದ್ಭವವಾಗುತ್ತಿದೆ.
ಕ್ರೀಡಾಕೂಟದ ಉದ್ಘಾಟನೆ ಸಂದರ್ಭದಲ್ಲಿ ಸೀಮಿತ ಜನರನ್ನು ಕ್ರೀಡಾಂಗಣದಲ್ಲಿ ಬಿಟ್ಟ ಕಾರಣ ಇಡೀ ಕ್ರೀಡಾಕೂಟದಲ್ಲಿ ಕ್ರೀಡಾಭಿಮಾನಿಗಳ ಕೊರತೆ ಎದ್ದು ಕಾಣುತ್ತಿತ್ತು. ಅದೇ ರೀತಿ ಮುಕ್ತಾಯ ಸಂಭ್ರಮದಲ್ಲೂ ಸಹ ಪ್ರೇಕ್ಷಕರ ಕೊರತೆಯಿಂದ ಬೀದಿಬದಿ ವ್ಯಾಪಾರಿಗಳು, ಪ್ರತಿ ಪಂಚಾಯಿತಿಯಿಂದ ಇಂತಿಷ್ಟು ಜನ ಕರೆತರಬೇಕು ಎಂಬ ಸೂಚನೆ ಮೇರೆಗೆ ಪಿಡಿಒಗಳು ಸಹ ಇತರೆ ಜನಸಾಮಾನ್ಯರನ್ನು ಒಟ್ಟುಗೂಡಿಸಿ ಕರೆತರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಅಂದಮೇಲೆ ಕ್ರೀಡಾಕೂಟ ಯಾರದೋ ಒಬ್ಬರ ಸ್ವಂತ ಕಾರ್ಯಕ್ರಮ ಆದಂತೆ ಕಾಣುತ್ತಿದೆ. ಕ್ರೀಡಾಪಟುಗಳ ಜೊತೆ ಜನಸಾಮಾನ್ಯರನ್ನೂ ವಿಶ್ವಾಸಕ್ಕೆ ಪಡೆದು ಕಾರ್ಯಕ್ರಮ ಆಯೋಜಿಸಿದ್ದರೆ ಇಂತಹ ದುಸ್ಥಿತಿ ಬರುತ್ತಿರಲಿಲ್ಲ ಎಂಬ ಮಾತುಗಳು ಪ್ರಜ್ಞಾವಂತರಿಂದ ಕೇಳಿ ಬರುತ್ತಿವೆ.
