ಕುಂಚಿಟಿಗ ಸಮುದಾಯದ ನಾಯಕತ್ವ ಕ್ಷೀಣಿಸುತ್ತಿದೆ : ಟಿ.ಬಿ.ಜಯಚಂದ್ರ

ಕುಂಚಿಟಿಗ ಸಮುದಾಯದ ನಾಯಕತ್ವ ಕ್ಷೀಣಿಸುತ್ತಿದೆ : ಟಿ.ಬಿ.ಜಯಚಂದ್ರ

ತುಮಕೂರು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿರುವ ಎಸ್.ಪಿ. ಮುದ್ದಹನುಮೇಗೌಡ ನಮ್ಮ ಸಮುದಾಯದ ವ್ಯಕ್ತಿ, ದಿವಂಗತ ಲಕ್ಕಪ್ಪ, ಮಲ್ಲಣ್ಣ ಅವರ ನಂತರ ಒಕ್ಕಲಿಗ ಸಮುದಾಯದಿಂದ ಮುದ್ದಹನುಮೇಗೌಡರಿಗೆ ಅವಕಾಶ ದೊರೆತ್ತಿದ್ದು, ಈ ಅವಕಾಶವನ್ನು ನಾವೆಲ್ಲರೂ ಬಳಸಿಕೊಳ್ಳಬೇಕಿದೆ ಎಂದು ಮಾಜಿ ಸಚಿವ ಹಾಗೂ ಸರಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.

ನಗರದ ಕುಂಚಶ್ರೀ ಸಭಾಂಗಣದಲ್ಲಿ ಜಿಲ್ಲಾ ಕುಂಚಟಿಗ ಸಮುದಾಯದ ವತಿಯಿಂದ ಆಯೋಜಿಸಿದ್ದ ಮುಖಂಡ ಸಭೆಯಲ್ಲಿ ಮಾತನಾಡಿದ ಅವರು, ಒಕ್ಕಲಿಗರಲ್ಲಿ, ಅದರಲ್ಲಿಯೂ ಕುಂಚಿಟಿಗ ಸಮುದಾಯದ ನಾಯಕತ್ವ ಕ್ಷೀಣಿಸುತ್ತಿದೆ. ಹಾಗಾಗಿ ಲೋಕಸಭೆಯಲ್ಲಿ ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡಿ, ಮುದ್ದಹನುಮೇಗೌಡರನ್ನು ಗೆಲ್ಲಿಸಿಕೊಳ್ಳಬೇಕಾಗಿದೆ ಎಂದರು.

ರಾಷ್ಟ್ರದ ವಿದ್ಯಮಾನ ಗಮನಿಸಿದರೆ ಹಿಂದೆಂದಿಗಿಂತಲೂ ಇಂದು ರಾಷ್ಟ್ರದ ಜನರಿಗೆ ಕಾಂಗ್ರೆಸ್ ಪಕ್ಷದ ಅವಶ್ಯಕತೆ ಇದೆ. ಕುಂಚಟಿಗರನ್ನು ಕೇಂದ್ರದ ಓಬಿಸಿ ಪಟ್ಟಿಗೆ ಸೇರಿಸುವ ಸಂಬಂಧ ಇದ್ದ ಅಡ್ಡಿ,ಆತಂಕಗಳನ್ನು ಸಿದ್ದರಾಮಯ್ಯ ನೇತೃತ್ವದ ಸರಕಾರ ನಿವಾರಿಸಿದೆ.ಸಚಿವ ಸಂಪುಟದಲ್ಲಿ ಮಂಡಿಸಿಲ್ಲ ಎಂಬ ಕಾರಣಕ್ಕೆ ವಾಪಸ್ಸಾಗಿದ್ದ ಓಬಿಸಿ ಜಾತಿ ಪಟ್ಟಿ ಕಡತವನ್ನು ಸಚಿವ ಸಂಪುಟದ ಮುಂದಿಟ್ಟು,ಚರ್ಚಿಸಿ,ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗಿದೆ.ಈಗಾಗಲೇ ಕೇಂದ್ರದ ಓಬಿಸಿ ಪಟ್ಟಿಗೆ ಸೇರಸಲು ೫೦-೬೦ ಜಾತಿಗಳು ಸರತಿ ಸಾಲಿನಲ್ಲಿವೆ.ಹಾಗಾಗಿ ಕೊಂಚ ತಡವಾಗುವ ಸಾಧ್ಯತೆ ಇದೆ.ನಮ್ಮದೇ ಸಮುದಾಯದ ಮುದ್ದ ಹನುಮೇಗೌಡರು ಸಂಸದರಾಗಿ ಹೋದರೆ ಮತ್ತಷ್ಟು ವೇಗ ಪಡೆದುಕೊಳ್ಳಲಿದೆ ಎಂದು ಟಿ.ಬಿ.ಜಯಚಂದ್ರ ತಿಳಿಸಿದರು.

ಕುಂಚಿಟಿಗ ಸಮುದಾಯದ ನಾಯಕತ್ವ ಕ್ಷೀಣಿಸುತ್ತಿದೆ : ಟಿ.ಬಿ.ಜಯಚಂದ್ರ
ಸಹಕಾರ ಸಚಿವ ಕೆ.ಎನ್.ರಾಜಣ್ಣ ಮಾತನಾಡಿ, ಪಕ್ಷದ ತೀರ್ಮಾನಕ್ಕೆ ಬದ್ದನಾಗಿ ತನ್ನ ಸ್ಥಾನವನ್ನು ದೇವೇಗೌಡರಿಗಾಗಿ ತ್ಯಾಗ ಮಾಡಿದ ಮುದ್ದಹನುಮೇಗೌಡರ ವಿರುದ್ದ ದೇವೇಗೌಡರ ಸೋಲಿಗೆ ಇವರೇ ಕಾರಣವೆಂಬಂತೆ ಅಪಪ್ರಚಾರ ಮಾಡ ಲಾಗುತ್ತಿದೆ. ದೇವೇಗೌಡರು ಮತ್ತು ಅವರ ಮಗ ಹೆಚ್.ಡಿ.ಕುಮಾರಸ್ವಾಮಿಯ ಸ್ವಯಂಕೃತ ತಪ್ಪುಗಳಿಂದ ಅವರಿಗೆ ಸೋಲಾಯಿತೇ ಹೊರತು,ಎಸ್.ಪಿ.ಮುದ್ದಹನುಮೇಗೌಡರ ಪಾತ್ರ ಇದರಲ್ಲಿ ಇಲ್ಲ.ಅಲ್ಲದೆ ಎಸ್.ಪಿ.ಮುದ್ದಹನುಮೇಗೌಡರು ಅಭ್ಯರ್ಥಿಯಾಗಬೇಕೆಂಬುದು ನನ್ನೊಬ್ಬನ ತೀರ್ಮಾನವಲ್ಲ.

ಇಡೀ ಪಕ್ಷದ ತೀರ್ಮಾನ ಹಾಗಾಗಿ ನನ್ನ ಮೇಲಿನ ಸಿಟ್ಟಿಗೆ ಮುದ್ದಹನುಮೇಗೌಡರಿಗೆ ಮತ ಹಾಕದಿರುವುದು ತರವಲ್ಲ. ೨೦೧೯ರ ಚುನಾವಣೆಯಲ್ಲಿ ಮುದ್ದಹನುಮೇಗೌಡರಿಗೆ ಟಿಕೇಟ್ ನೀಡದೆ ಅನ್ಯಾಯ ಮಾಡಲಾಗಿದೆ ಎಂಬ ಕಾರಣಕ್ಕೆ ಪಕ್ಷದ ಹೈಕಮಾಂಡ್ ಟಿಕೇಟ್ ನೀಡಿದೆ ಎಂದು ಸ್ಪಷ್ಟಪಡಿಸಿದರು.

ಕೆ.ಎಸ್.ಆರ್.ಟಿ.ಸಿ. ಅಧ್ಯಕ್ಷ ಹಾಗೂ ಶಾಸಕ ಎಸ್.ಆರ್.ಶ್ರೀನಿವಾಸ್ ಮಾತನಾಡಿ,ಇದು ಒಕ್ಕಲಿಗರ ಸ್ವಾಭಿಮಾನದ ಪ್ರಶ್ನೆ, ಓರ್ವ ವೀರಶೈವ-ಲಿಂಗಾಯಿತರಿಗೆ ಟಿಕೇಟ್ ದೊರೆತರೆ ಇಡೀ ಸಮುದಾಯ ಒಂದಾಗಿ ಅವರ ಗೆಲುವಿಗೆ ಶ್ರಮಿಸುತ್ತದೆ. ಆದರೆ ಒಕ್ಕಲಿಗರಲ್ಲಿ ಆ ಒಗ್ಗಟ್ಟು ಬರಬೇಕು. ಆಗ ಮಾತ್ರ ರಾಜಕೀಯವಾಗಿ ಬೆಳೆಯಲು ಸಾಧ್ಯ.ಲಕ್ಕಪ್ಪ ನವರ ನಂತರ ಸಿಕ್ಕಿರುವ ಈ ಅವಕಾಶವನ್ನು ಬಳಸಿಕೊಂಡು ನಾವೆಲ್ಲರೂ ಮುದ್ದಹನುಮೇಗೌಡರನ್ನು ಸಂಸದರಾಗಿ ಮಾಡಬೇಕಾಗಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ,ಕಳೆದ ೩೫ ವರ್ಷಗಳ ಹಿಂದೆ ನಾನು ಮಧುಗಿರಿ ಕ್ಷೇತ್ರದಿಂದ ಸ್ಪರ್ಧೆ ಮಾಡಿದ ಸಂದರ್ಭದಲ್ಲಿ ಒಕ್ಕಲಿಗ ಸಮುದಾಯದವರು ನೀಡಿದ ಸಹಕಾರವನ್ನು ಮರೆಯುವಂತಿಲ್ಲ. ಇದೊಂದು ಒಳ್ಳೆಯ ಅವಕಾಶ. ಸಂವಿಧಾನ ಉಳಿಯಬೇಕು. ನಮ್ಮೆಲ್ಲರ ಬದುಕು ಹಸನಾಗಬೇಕು ಎಂದರೆ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕಾಗಿದೆ.೧೦ ವರ್ಷಗಳಲ್ಲಿ ನರೇಂದ್ರ ಮೋದಿ ಸರಕಾರದಿಂದ ಈ ದೇಶದ ರೈತರಿಗಾಗಲಿ, ಬಡವರಿಗಾಗಲಿ, ಜನಸಾಮಾನ್ಯರಿಗಾಗಲಿ ಯಾವುದೇ ಉಪಯೋಗವಾಗಿಲ್ಲ. ಬೆಂಬಲ ಬೆಲೆಗೆ ಕಾನೂನಿನ ಮಾನ್ಯತೆ ಜೊತೆಗೆ,ಶೇ೫೦ರ ಮೀಸಲಾತಿ ಮಿತಿ ತೆಗೆದು ಹಾಕುವ ಗ್ಯಾರೆಂಟಿ ನೀಡಿರುವ ಕಾಂಗ್ರೆಸ್ ಪಕ್ಷವನ್ನು ಒಕ್ಕಲಿಗ ಸಮುದಾಯ ನಮ್ಮ ಪಕ್ಷ ಎಂದು ಒಪ್ಪಿಕೊಂಡು ಮತ ಚಲಾಯಿಸಬೇಕಾಗಿದೆ ಎಂದು ಮನವಿ ಮಾಡಿದರು.

ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ,ನನ್ನ ಐದು ವರ್ಷಗಳ ಅವಧಿಯಲ್ಲಿ ಅತ್ಯಂತ ಕ್ರಿಯಾಶೀಲ ವಾಗಿ ಒಕ್ಕಲಿಗ ಸಮಾಜದ ಜೊತೆಗೆ, ಮತದಾರರ ಘನತೆ,ಗೌರವ ಕಾಪಾಡುವ ರೀತಿಯಲ್ಲಿ ನಡೆದುಕೊಂಡಿದ್ದೇನೆ. ಈ ಬಾರಿಯೂ ನನಗೆ ಆಶೀರ್ವಾದ ಮಾಡಿ ಲೋಕಸಭೆಗೆ ಕಳುಹಿಸಿದರೆ ನಿಮ್ಮ ನಿರೀಕ್ಷೆಗೂ ಮೀರಿ ಕೆಲಸ ಮಾಡುವುದಾಗಿ ಮನವಿ ಮಾಡಿದರು.