ಬೆಟ್ಟಿಂಗ್ ವಿಚಾರ: ಎಸ್ಪಿ ಸೇರಿ ನಾಲ್ವರು ಪೊಲೀಸ್ ಅಧಿಕಾರಿಗಳ ವಿರುದ್ಧ ಖಾಸಗಿ ದೂರು ದಾಖಲು

ತುಮಕೂರು: ಕಳೆದ ಅಕ್ಟೋಬರ್ ತಿಂಗಳಲ್ಲಿ ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ನಡೆದಿದ್ದ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿ ಸಂದರ್ಭದಲ್ಲಿ ಕಬಡ್ಡಿ ಪಂದ್ಯಾವಳಿ ಸಂಬಂಧ ಜಿಲ್ಲಾಧಿಕಾರಿ ಶುಭಕಲ್ಯಾಣ್ ಜತೆ 500 ರೂ. ಬೆಟ್ಟಿಂಗ್ ಕಟ್ಟಿರುವುದಾಗಿ ಬಹಿರಂಗ ಹೇಳಿಕೆ ನೀಡಿದ್ದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹಾಗೂ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ವಿರುದ್ಧ ದೂರು ದಾಖಲಿಸದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಮಧುಗಿರಿ ತಾಲ್ಲೂಕಿನ ಪೊಲೀಸ್ ಅಧಿಕಾರಿಗಳ ವಿರುದ್ಧ ಮಧುಗಿರಿ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಾಗಿದೆ.

ಈ ಸಂಬಂಧ ಕೊಡಿಗೇನಹಳ್ಳಿ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಸೇರಿದಂತೆ ಮಧುಗಿರಿ ಸರ್ಕಲ್ ಇನ್ಸ್ ಪೆಕ್ಟರ್, ಡಿವೈಎಸ್ಪಿ ಹಾಗೂ ತುಮಕೂರು ಎಸ್ಪಿ ರವರುಗಳಿಗೆ ಸಾಮಾಜಿಕ ಹೋರಾಟಗಾರ ಹಂದ್ರಾಳ್ ನಾಗಭೂಷಣ್ ಎಂಬುವರು ಲಿಖಿತವಾಗಿ ದೂರು ನೀಡಿದ್ದರು.

ಈ ದೂರಿಗೆ ಕೊಡಿಗೇನಹಳ್ಳಿ ಸಬ್ ಇನ್ಸ್ ಪೆಕ್ಟರ್ ರವರು ದೂರುದಾರ ಹಂದ್ರಾಳ್ ನಾಗಭೂಷಣ್ ಗೆ ನೀವು ನೀಡಿರುವ ದೂರು ನಿರಾಧಾರವಾಗಿದ್ದು, ಯಾವುದೇ ಸಾಕ್ಷಿಗಳು ಇಲ್ಲ ಎಂದು ಹಿಂಬರಹ ನೀಡಿ ಕೈ ತೊಳೆದುಕೊಂಡಿದ್ದರು. ಈ ಬಗ್ಗೆ ಪುನಃ ದೂರುದಾರ ಎಫ್ ಐ ಆರ್ ದಾಖಲಿಸಲು ಸೂಕ್ತ ನಿರ್ದೇಶನಕ್ಕಾಗಿ ಮಧುಗಿರಿ ಸರ್ಕಲ್ ಇನ್ಸ್ ಪೆಕ್ಟರ್, ಡಿವೈಎಸ್ಪಿ ಮತ್ತು ತುಮಕೂರು ಎಸ್. ಪಿ ರವರಿಗೂ ದೂರು ನೀಡಿದ್ದರು.

ಆದರೂ 500 ರೂ. ಬೆಟ್ಟಿಂಗ್ ಆಡಿ ಸೋತು ಹಣ ಕಳೆದುಕೊಂಡಿದ್ದ ಪರಮೇಶ್ವರ್ ಹಾಗೂ ಶುಭಕಲ್ಯಾಣ್ ವಿರುದ್ಧ ಎಫ್ ಐ ಆರ್ ದಾಖಲಿಸಲು ಜಿಲ್ಲೆಯ ಪೊಲೀಸ್ ಆಡಳಿತ ವಿಫಲವಾಗಿರುವ ಕಾರಣ ನ. 26 ರಂದು ದೂರುದಾರ ಹಂದ್ರಾಳು ನಾಗಭೂಷಣ್ ಅವರು ಎಫ್ ಐ ಆರ್ ದಾಖಲಿಸದ ಕೊಡಿಗೇನಹಳ್ಳಿ ಸಬ್ ಇನ್ಸ್ ಪೆಕ್ಟರ್ ಶ್ರೀನಿವಾಸ್ ಪ್ರಸಾದ್ ಸೇರಿದಂತೆ ಮಧುಗಿರಿ ಸಿಪಿಐ ಹನುಮಂತರಾಯ, ಡಿವೈಎಸ್ಪಿ ಮಂಜುನಾಥ್ ಮತ್ತು ತುಮಕೂರು ಎಸ್ಪಿ ಕೆ.ವಿ. ಅಶೋಕ್ ರವರುಗಳ ವಿರುದ್ದ ಮಧುಗಿರಿಯ ಅಧಿಕ ಸಿವಿಲ್ ಜಡ್ಜ್ ಹಾಗೂ ಜೆ.ಎಂ.ಎಫ್.ಸಿ (ಕಿರಿಯ ಶ್ರೇಣಿ) ನ್ಯಾಯಾಲಯದಲ್ಲಿ ಪಾರ್ಟಿ ಇನ್ ಪರ್ಸನ್ ಖಾಸಗಿ ದಾವೆ ದಾಖಲಿಸಿದ್ದು, ನ್ಯಾಯಾಲಯವು PCR/132/2025 ರಂತೆ ದಾಖಲು ಮಾಡಿಕೊಂಡಿದೆ.

ದೂರುದಾರರ ಹೇಳಿಕೆ : ಸಾಮಾನ್ಯ ಜನರು ಬೆಟ್ಟಿಂಗ್ ಆಡಿದರೆ ತಕ್ಷಣ ಬಂಧಿಸುವ ಪೊಲೀಸರು ರಾಜ್ಯದ ಜವಾಬ್ದಾರಿ ಸ್ಥಾನದಲ್ಲಿರುವ ಸಚಿವರು ಮತ್ತು ಜಿಲ್ಲೆಯ ಜವಾಬ್ದಾರಿ ಹೊತ್ತಿರುವ ಜಿಲ್ಲಾಧಿಕಾರಿ ವಿರುದ್ದ ದೂರು ದಾಖಲಿಸದಿರುವುದು ಪೊಲೀಸರ ವೈಫಲ್ಯ. ಈ ನೆಲದ ಕಾನೂನು ಎಲ್ಲರಿಗೂ ಒಂದೇ ಎಂಬ ಸಂದೇಶವನ್ನು ಸಮಾಜಕ್ಕೆ ತಿಳಿಸಲು ನ್ಯಾಯಾಲಯದಲ್ಲಿ ಈ ದಾವೆ ಹಾಕಿದ್ದೇನೆ. ನನಗೆ ನ್ಯಾಯಾಂಗದಲ್ಲಿ ಅಪಾರ ನಂಬಿಕೆ ಇದ್ದು, ಸಾಮಾಜಿಕ ನ್ಯಾಯ ಸಿಗುತ್ತದೆ ಎಂಬ ಭರವಸೆ ಇದೆ ಎಂದು ದೂರುದಾರ ಹಂದ್ರಾಳ್ ನಾಗಭೂಷಣ್ ತಿಳಿಸಿದ್ದಾರೆ.